ಅಕ್ರಮ ರಕ್ತ ಚಂದನ ಸಾಗಿಸುತ್ತಿದ್ದ ಕಾರು ಪಲ್ಟಿ: ಮೂವರಿಗೆ ಗಾಯ.

ಚಿಕ್ಕಬಳ್ಳಾಪುರ: ಅಕ್ರಮವಾಗಿ ರಕ್ತ ಚಂದನ ಸಾಗಿಸುತ್ತಿದ್ದ ಕಳ್ಳರ ಕಾರು ಭೀಕರ ಅಪಘಾತಕ್ಕೀಡಾಗಿ ನಜ್ಜು ಗುಜ್ಜಾಗಿದ್ದರೂ ಕಳ್ಳರು ಪವಾಡವೆಂಬಂತೆ ಪಾರಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದಿದೆ.
ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿ 44ರ ಸಾದಲಿ ಕ್ರಾಸ್ ಬಳಿ ಇನ್ನೋವಾ ಕಾರು ಅಪಘಾತವಾಗಿದೆ.
ಕಾರು ಹೆದ್ದಾರಿಯಲ್ಲಿ ಡಿವೈಡರ್ಗೆ ಡಿಕ್ಕಿ ಹೊಡೆದ ರೀತಿಯಲ್ಲಿ ಗುರುತೇ ಸಿಗದಂತೆ ಸಂಪೂರ್ಣ ನಜ್ಜುಗುಜ್ಜಾಗಿ ಬಿದ್ದಿದೆ. ಕಾರಿನಲ್ಲಿದ್ದ ರಕ್ತಚಂದನ ಕಳ್ಳರಾದ ನಾಗರಾಜು, ನಾಗೇಂದ್ರ, ಶ್ರೀನಿವಾಸ್ ಮೂವರಿಗೂ ಗಾಯಗಳಾಗಿದ್ದು, ಅವರನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದರೂ ಅದೃಷ್ಟವಂತ್ ಎಂಬಂತೆ ಮೂವರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನಲ್ಲಿ 24 ರಕ್ತ ಚಂದನದ ತುಂಡುಗಳನ್ನು ಸೀಟಿನ ಕೆಳಭಾಗದಲ್ಲಿ ಇಟ್ಟುಕೊಂಡು ಸಾಗಿಸಲಾಗುತ್ತಿತ್ತು. ನೆರೆಯ ಆಂಧ್ರಪ್ರದೇಶದಿಂದ ಬೆಂಗಳೂರಿಗೆ ರಕ್ತ ಚಂದನದ ತುಂಡುಗಳನ್ನ ಸಾಗಾಟ ಮಾಡಲಾಗುತ್ತಿತ್ತು. ಸದ್ಯ ರಕ್ತ ಚಂದನದ ತುಂಡುಗಳನ್ನ ಪೇರೇಸಂದ್ರ ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ಸ್ಥಳಕ್ಕೆ ಗುಡಿಬಂಡೆ ಸಿಪಿಐ ನಯಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.