ರಾಜ್ಯದ ಶಾಲೆಗಳಲ್ಲಿ ಸೆಪ್ಟೆಂಬರ್ 5 ರಿಂದ ಸಂವಿಧಾನದ ಓದು ಕಾರ್ಯಕ್ರಮ ಚಾಲನೆ: ಸಚಿವ ಮಧು ಬಂಗಾರಪ್ಪ.

ಧಾರವಾಡ: ಸೆ.5 ರಂದು ನಡೆಯುವ ಶಿಕ್ಷಕರ ದಿನಾಚರಣೆಯಂದು ರಾಜ್ಯಾದ್ಯಂತ ಎಲ್ಲ ಶಾಲೆಗಳಲ್ಲೂ ವಿದ್ಯಾರ್ಥಿಗಳು ಸಂವಿಧಾನದ ಪ್ರಸ್ತಾವನೆಯನ್ನು ಪ್ರತಿದಿನ ಕಡ್ಡಾಯವಾಗಿ ಓದುವ ಕಾರ್ಯಕ್ರಮ ಜಾರಿಗೊಳಿಸಲಾ ಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು.
ಧಾರವಾಡದಲ್ಲಿ ಬೆಂಗಳೂರಿನ ಇಕೋ ವಾಚ್ ಸಂಘಟನೆ, ಕರ್ನಾಟಕ ವಿದ್ಯಾವರ್ಧಕ ಸಂಘ ಹಾಗೂ ಬಾಲ ಬಳಗ ಸೃಜನಶೀಲ ಶಿಕ್ಷಣ ಪ್ರತಿಷ್ಠಾನ ವತಿಯಿಂದ ವಿದ್ಯಾವರ್ಧಕ ಸಂಘದ ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಸೋಮವಾರ ಆಯೋಜಿಸಿದ್ದ ಮಕ್ಕಳ ನಡಿಗೆ ಹಸಿರಿನ ಕಡೆಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂವಿಧಾನ ಓದು ಕಾರ್ಯಕ್ರಮಕ್ಕೆ ಎರಡು ದಿನಗಳಲ್ಲಿ ಆದೇಶ ಹೊರಬೀಳಲಿದೆ. ದೇಶದಲ್ಲಿನ ಪ್ರಜೆಗಳೆಲ್ಲರೂ ಅನ್ಯೂನ್ಯವಾಗಿ ಬಾಳಲು ಸಂವಿಧಾನ ಅವಕಾಶ ಮಾಡಿಕೊಟ್ಟಿದೆ. ಸಂವಿಧಾನ ಪ್ರಸ್ತಾವನೆಯನ್ನು ಎಲ್ಲರೂ ಓದಿ ತಿಳಿದುಕೊಳ್ಳಬೇಕು ಎಂಬುದು ಈ ಕಾರ್ಯಕ್ರಮದ ಆಶಯ ಎಂದರು.
ಈ ವರ್ಷ 50 ಲಕ್ಷ ಸಸಿಗಳನ್ನು ನೆಡಲು ತೀರ್ಮಾನಿ ಸಲಾಗಿದೆ. ಶಾಲಾ ಮತ್ತು ಸಾಕ್ಷರತಾ ಶಿಕ್ಷಣ ಇಲಾಖೆ ಹಾಗೂ ಅರಣ್ಯ ಇಲಾಖೆ ಸಹಯೋಗದಲ್ಲಿ ಸಸಿ ನೆಡುವ ಕಾರ್ಯಕ್ರಮ ನಡೆಯಲಿದೆ. ಬಿಸಿಯೂಟ ಸೇವನೆ ನಂತರ ಮಕ್ಕಳು ಗಿಡದ ಬುಡದಲ್ಲಿ ತಟ್ಟೆ ತೊಳೆಯುವಂತೆ ಉದ್ದೇಶಿಸಲಾಗಿದೆ ಎಂದು ಹೇಳಿದರು.
ಶಾಲಾ ಶಿಕ್ಷಣ ಇಲಾಖೆಯಲ್ಲಿ ಸಮಸ್ಯೆಗಳು ಬಗೆಹರಿದಿಲ್ಲ. ಕೆಲವೆಡೆ ಶಾಲಾ ಕಟ್ಟಡ ಸಮಸ್ಯೆ, ಶಿಕ್ಷಕರ ಕೊರತೆ ಮೊದಲಾದ ಸಮಸ್ಯೆಗಳು ಇವೆ. ಎರಡು ವರ್ಷದಲ್ಲಿ ಎಲ್ಲ ಸಮಸ್ಯೆ ಪರಿಹರಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.