ಕೊಪ್ಪಳಸುವರ್ಣ ಗಿರಿ ಟೈಮ್ಸ್
ಶ್ರೀರಾಮುಲು ರಾಜ್ಯಮಟ್ಟದ ವ್ಯಕ್ತಿಯನ್ನಾಗಿ ಬೆಳೆಸಿದ್ದೇ ನಾನು: ಜನಾರ್ದನ ರೆಡ್ಡಿ

ಗಂಗಾವತಿ: ಮಾಜಿ ಸಚಿವ ಬಿ. ಶ್ರೀರಾಮುಲು ಅವರನ್ನು ರಾಜ್ಯ ಮಟ್ಟದ ವ್ಯಕ್ತಿಯನ್ನಾಗಿ ಬೆಳೆಸಿದ್ದೇ ನಾನು ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.
ನಗರದ ವಾಲ್ಮೀಕಿ ವೃತ್ತದಲ್ಲಿ ತಾಲೂಕು ಆಡಳಿತ ಮತ್ತು ಪರಿಶಿಷ್ಟ ಪಂಗಡ ಇಲಾಖೆಯಿಂದ ಜರುಗಿದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಾಲ್ಮೀಕಿ ಸಮಾಜಕ್ಕೂ ತಮಗೂ ಅವಿನಾಭಾವ ಸಂಬಂಧ ಇದೆ. ಗಂಗಾವತಿ ಕ್ಷೇತ್ರಕ್ಕೆ ಚುನಾವಣೆ ಸ್ಪರ್ಧಿಸುವ ಮುನ್ನ ನನಗೆ ವಾಲ್ಮೀಕಿ ಸಮಾಜದವರೇ ಬೆಂಬಲವಾಗಿ ನಿಂತಿದ್ದರು. ಇದರಿಂದ ನನಗೆ ವಾಲ್ಮೀಕಿ ಸಮಾಜ ಎಂದರೆ ಬಹಳ ಪ್ರೀತಿಯ ಸಮಾಜ ಎಂದರು.
ಇನ್ನು ಬಳ್ಳಾರಿಯ ಶ್ರೀರಾಮುಲು ಹಾಗೂ ಸಿರಗುಪ್ಪದ ಸೋಮಲಿಂಗಪ್ಪ ಅವರನ್ನು ಶಾಸಕರನ್ನಾಗಿ ಮಾಡಿದ್ದೇ ನಾನು ಎಂದ ಜನಾರೆಡ್ಡಿ, ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ನಾವು ಪರಸ್ಪರ ಸ್ವಲ್ಪ ದೂರ ಉಳಿದಿದ್ದೇವೆಯೇ ಹೊರತು ವಾಲ್ಮೀಕಿ ಸಮಾಜಕ್ಕೆ ನಾನು ಯಾವತ್ತಿಗೂ ಬೆಂಬಲವಾಗಿ ನಿಲ್ಲುತ್ತೇನೆ ಎಂದರು.