ಕೃಷ್ಣದೇವರಾಯ ವಿಶ್ವವಿದ್ಯಾಲಯದ ವಾಣಿಜ್ಯ ಶಾಸ್ತ್ರ ಕಟ್ಟಡದ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಉದ್ಘಾಟನೆ.

ಬಳ್ಳಾರಿ: ಕೃಷ್ಣದೇವರಾಯ ವಿಶ್ವವಿದ್ಯಾಲಯ (ಪಿಎಸ್ಕೆಯು) ಆವರಣದಲ್ಲಿ ನಿರ್ಮಿಸುತ್ತಿರುವ ವಾಣಿಜ್ಯ ಶಾಸ್ತ್ರ ಮತ್ತು ನಿರ್ವಹಣಾ ಶಾಸ್ತ್ರ ಕಟ್ಟಡದ ಕಾಮಗಾರಿ ಪೂರ್ಣಗೊಳ್ಳುವ ಮುನ್ನವೇ ಉದ್ಘಾಟನೆ ಯೋಗ ಬಂದಿದ್ದು, ವ್ಯಾಪಕ ಚರ್ಚೆಗಳಿಗೆ ಕಾರಣವಾಗಿದೆ.
ವಿವಿ ಕುಲಪತಿ ಪ್ರೊ.ಸಿದ್ದು, ಪಿ. ಅಲಗೂರ ಅವರ ಅಧಿಕಾರಾವಧಿ ಕೊನೆಗೊಳ್ಳಲಿದ್ದು, ಇನ್ನೂ ಪೂರ್ಣಗೊಳ್ಳದ ಕಟ್ಟಡವನ್ನು ತರಾತುರಿಯಲ್ಲಿ ಉದ್ಘಾಟಿಸಲು ಮಹೂರ್ತ ಬೆಳಿಗ್ಗೆ 11ಗಂಟೆಗೆ ನಿಗದಿಯಾಗಿದೆ.

ಕಟ್ಟಡ ಉದ್ಘಾಟಿಸುವ ಅವಸರದಲ್ಲಿ ಶಿಷ್ಟಾಚಾರ ನಿಯಮಗಳನ್ನು ಮರೆತಂತಿದೆ. ಸ್ಥಳೀಯ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಿಲ್ಲ. ಅವರಿಗೆ ಆಮಂತ್ರಣವನ್ನೂ ನೀಡಿಲ್ಲ ಎಂಬ ಆರೋಪ ರಾಜಕೀಯ ವಲಯದಲ್ಲಿ ಕೇಳಿ ಬಂದಿದೆ.
ಸಿದ್ದು ಅಲಗೂರ ಅವರೇ ಕಟ್ಟಡ ಉದ್ಘಾಟಿಸಲಿದ್ದು. ಸಿಂಡಿಕೇಟ್ ಸದಸ್ಯರಾದ ರಮೇಶ್ ಭೂಪಾಲ್ ಸವದಿ, ಸುರೇಶ್ ಆರ್. ಸಜ್ಜನ್, ಕುಲಸಚಿವ ಪ್ರೊ. ಎಸ್.ಸಿ. ಪಾಟೀಲ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ವಾಣಿಜ್ಯ ಮತ್ತು ನಿರ್ವಹಣ ಶಾಸ್ತ್ರ ಕಟ್ಟಡವನ್ನು ₹ 5.75 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಸದ್ಯಇಲ್ಲಿ ಬುನಾದಿ ಮೇಲೆ ಪಿಲ್ಲರ್ಗಳು, ಗೋಡೆಗಳು ಎದ್ದಿವೆ. ರೂಫ್ ಪೂರ್ಣಗೊಂಡಿದೆ. ಕನಿಷ್ಠ ಪಕ್ಷ ಶೇ 50 ಭಾಗ ಕಾಮಗಾರಿ ಉಳಿದಿದೆ.
ಗೋಡೆ ಪ್ಲಾಸ್ಟರಿಂಗ್ ಆಗಿಲ್ಲ. ಅಲ್ಪಸ್ವಲ್ಪ ಮುಗಿದಿವೆ. ಶೌಚಾಲಯಗಳ ಕೆಲಸ ನಡೆಯಬೇಕಿದೆ. ಕಿಟಕಿ, ಬಾಗಿಲು ಅಳವಡಿಸಿಲ್ಲ. ಬಣ್ಣದ ಕೆಲಸವೂ ಇನ್ನಷ್ಟೆ ಆರಂಭವಾಗ ಬೇಕಿದೆ. ಇಲೆಕ್ಟಿಕಲ್ ಕೆಲಸವೂ ಆರಂಭವಾಗಿಲ್ಲ.
ಕಟ್ಟಡ ಕಾಮಗಾರಿ ಬಹುತೇಕ ಮುಗಿದಿದೆ ಎಂದು ತೋರಿಸಲು ಕಟ್ಟಡ ಮುಂಭಾಗದ ಎಲಿವೇಷನ್ ಕೆಲಸಗಳನ್ನು ತರಾತುರಿಯಲ್ಲಿ ನಡೆಸಲಾಗುತ್ತಿದೆ. ಅಲ್ಪಸ್ವಲ್ಪ ಪ್ರೈಮರ್ ಬಳಿದು ಬಣ್ಣ ಹಚ್ಚುವುದು ಮಾತ್ರ ಉಳಿದಿದೆ ಎಂದು ಸಾಬೀತುಪಡಿಸುವ ಪ್ರಯತ್ನ ನಡೆಯುತ್ತಿದೆ ಎಂಬ ಟೀಕೆಗಳು ವ್ಯಕ್ತವಾಗಿದೆ.
ಯಾವುದೇ ಕಟ್ಟಡ ಪೂರ್ಣಗೊಂಡ ಬಳಿಕ ಸ್ಥಳೀಯ ಆಡಳಿತದಿಂದ ಪ್ರಮಾಣ ಪತ್ರ ಪಡೆದು ಉದ್ಘಾಟನೆ ಮಾಡುವುದು ವಾಷಿಕ ಸರ್ಕಾರಿ ಕಟ್ಟಡಗಳಿಗೆ ಪ್ರಮಾಣ ಪತ್ರದ ಅಗತ್ಯವಿಲ್ಲ. ಆದರೆ, ಕಟ್ಟಡ ವಿಭಾಗದ ಎಂಜಿನಿಯರ್ಗಳು ಕಟ್ಟಡದ ಗುಣಮಟ್ಟ, ಸುರಕ್ಷತೆ ಮತ್ತು ಗುತ್ತಿಗೆದಾರರು ಬಲ್ಗಳನ್ನು ದೃಢೀಕರಿಸಬೇಕು ಎಂದು ಪಾಲಿಕೆ ಹಾಗೂ ಲೋಕೋಪಯೋಗಿ ಇಲಾಖೆ ಮೂಲಗಳು ತಿಳಿಸಿವೆ.
ವಾಣಿಜ್ಯಶಾಸ್ತ್ರ ಹಾಗೂ ನಿರ್ವಹಣಾ ಶಾಸ್ತ್ರದ ಕಟ್ಟಡ ನಿರ್ಮಾಣದ ಗುತ್ತಿಗೆ ಪಡೆದಿರುವ ವಿ.ಬಿ. ಪ್ರಸಾದ್ ರೆಡ್ಡಿ ಅವರ ಕಂಪನಿಯ ಎಂಜಿನಿಯರ್ ಅಶೋಕ್ ಹೇಳುವಂತೆ, “ಕಟ್ಟಡದಲ್ಲಿ ಇನ್ನೂ ಕೆಲಸಗಳು ಬಾಕಿ ಇದ್ದು 15 ದಿನದೊಳಗೆ ಮುಗಿಯಲಿವೆ.
ವಿವಿ ಕಟ್ಟಡ ವಿಭಾಗದ ಮೂಲಗಳ ಪ್ರಕಾರ, ಕಾಮಗಾರಿ ಇನ್ನೂ ಸಾಕಷ್ಟು ಬಾಕಿ ಇದೆ. ನಾವು ವಿಶ್ವವಿದ್ಯಾಲಯದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ. ಯಾವುದಕ್ಕೂ ನಮ್ಮ ಸಲಹೆ ಪಡೆಯುತ್ತಿಲ್ಲ. ನಾಳೆ ಕಟ್ಟಡ ಉದ್ಘಾಟನಾ ಸಮಾರಂಭದ ಮಾಹಿತಿಯೂ ನಮಗಿಲ್ಲ. ನಮ್ಮ ಸಲಹೆ ಕೇಳಿದ್ದರೆ ಪೂರ್ಣಗೊಳ್ಳದ ಕಟ್ಟಡದ ಉದ್ಘಾಟನೆ ಸರಿಯಲ್ಲ ಎಂಬ ಅಭಿಪ್ರಾಯ ಕೊಡುತ್ತಿದ್ದೆವು. ಕುಲಪತಿ ಅವರಾಗಲೀ ಅಥವಾ ರಿಜಿಸ್ಟ್ರಾರ್ ಅವರಾಗಲೀ ನಮ್ಮನ್ನು ಸಂಪರ್ಕಿಸಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ.
ಜುಲೈ 13 ರಂದು ವಿವಿ ಘಟಿಕೋತ್ಸವ ನಡೆದ ದಿನದಿಂದ ಇಲ್ಲಿಯವರೆಗೆ ₹ 4.95 ಕೋಟಿ ವೆಚ್ಚದಲ್ಲಿ ಕಟ್ಟಿದ ಆಡಳಿತ ವಿಭಾಗ, ₹ 5 ಕೋಟಿಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಿರುವ ಹುಡುಗರ ವಿದ್ಯಾರ್ಥಿ ನಿಲಯ, ₹ 3.5 ಕೋಟಿ ವೆಚ್ಚದ ಸಿಎಂಆರ್ಎಫ್ ಕಟ್ಟಡ, ಜೆಎಸ್ಡಬ್ಲ್ಯು ನೆರವಿನಿಂದ ಕೈಗೊಂಡ ಬಟಾನಿಕಲ್ ಗಾರ್ಡನ್, ಅಲ್ಲದೆ, ವಿವೇಕಾನಂದ ಪ್ರತಿಮೆ ಉದ್ಘಾಟನೆಗೊಂಡಿದೆ.